ತೂಗುಕತ್ತಿಯಿಂದ ಪಾರಾದ ಜೆ.ಡಿ.ಎಸ್. ಬಂಡಾಯ ಶಾಸಕರು..?

ಜೆ.ಡಿ.ಎಸ್. ಪಕ್ಷದ ಬಂಡಾಯ ಶಾಸಕರ ಅನರ್ಹತೆ ಕುರಿತಾಗಿ ಸ್ಪೀಕರ್ ಇನ್ನೂ ಕ್ರಮ ಕೈಗೊಳ್ಳದ ಕಾರಣ, ಅವರು ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾವಣೆ ಮಾಡಬಹುದಾಗಿದೆ.

ಸ್ಪೀಕರ್ ಆದೇಶ ನೀಡುವವರೆಗೆ ಶಾಸಕರೆಂದೇ ಅವರನ್ನು ಪರಿಗಣಿಸಲಾಗುತ್ತದೆ. ಸ್ಪೀಕರ್ ಗೆ ಮತದಾನಕ್ಕೆ ಅವಕಾಶ ನೀಡಬೇಡಿ ಎಂದು ಆದೇಶ ನೀಡಲು ಸಾಧ್ಯವಿಲ್ಲ. ಆದರೆ, ಶಾಸಕರ ಅನರ್ಹತೆ ಕುರಿತಾಗಿ ಬೇಗನೆ ತೀರ್ಪು ಪ್ರಕಟಿಸಿ ಎಂದು ಹೇಳಬಹುದಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

ಮಾರ್ಚ್ 23 ರಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಜೆ.ಡಿ.ಎಸ್.ನ 7 ಮಂದಿ ಬಂಡಾಯ ಶಾಸಕರ ಅನರ್ಹತೆ ಕುರಿತಾಗಿ ಸ್ಪೀಕರ್ ಅಷ್ಟರೊಳಗೆ ತೀರ್ಪು ನೀಡುವ ಸಾಧ್ಯತೆ ತೀರಾ ಕಡಿಮೆ ಇದೆ. ಹಾಗಾಗಿ ಬಂಡಾಯ ಶಾಸಕರು ನಿರಾಳರಾಗಿದ್ದು, ಅನರ್ಹರಾಗುವ ತೂಗುಕತ್ತಿಯಿಂದ ಪಾರಾಗುವುದು ಕೂಡ ಬಹುತೇಕ ನಿಶ್ಚಿತವಾಗಿದೆ.

ರಾಜ್ಯಸಭೆ ಚುನಾವಣೆಯ ಒಳಗೆ ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ಜೆ.ಡಿ.ಎಸ್. ಹೈಕೋರ್ಟ್ ಮೊರೆ ಹೋಗಿದೆ. ಆದರೆ, ಸ್ಪೀಕರ್ ತೀರ್ಪು ನೀಡದ ಕಾರಣ, ಹೈಕೋರ್ಟ್ ಆದೇಶ ನೀಡಿಲ್ಲ. ಸ್ಪೀಕರ್ ಗೆ ತುರ್ತು ನೋಟಿಸ್ ಜಾರಿ ಮಾಡಿದೆ.

ಸ್ಪೀಕರ್ ಈಗಾಗಲೇ ತಜ್ಞರಿಂದ ಕಾನೂನು ಸಲಹೆ ಪಡೆದುಕೊಂಡಿದ್ದು, ಸದ್ಯಕ್ಕೆ ಶಾಸಕರ ಅನರ್ಹತೆ ಬಗ್ಗೆ ತೀರ್ಪು ನೀಡದಿರಲು ತೀರ್ಮಾನಿಸಿದ್ದಾರೆ. ಸ್ಪೀಕರ್ ತೀರ್ಪು ನೀಡದ ಹೊರತು, ಹೈಕೋರ್ಟ್ ಶಾಸಕರ ಅನರ್ಹತೆ ಕುರಿತಾಗಿ ಆದೇಶ ನೀಡುವಂತಿಲ್ಲ. ಈ ಕಾರಣದಿಂದ ಬಂಡಾಯ ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾವಣೆ ಮಾಡಬಹುದಾಗಿದೆ. ಈ ಶಾಸಕರು ರಾಜ್ಯಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದೆ.

Leave a Reply